
ಅದ್ಧೂರಿಯಾಗಿ ಜರುಗಿದ ಶ್ರೀ ದಂಡಿನಮಾರಮ್ಮ ಉತ್ಸವ
ಹಾಸನ: ಶ್ರೀ ದಂಡಿನಮಾರಮ್ಮ, ಶ್ರೀ ಚಿಕ್ಕಮ್ಮ ಮತ್ತು ಶ್ರೀ ಕೆಂಚರಾಯಸ್ವಾಮಿಯವರ ೨೪೧ನೇ ವರ್ಷದ ಜಾತ್ರಾಮಹೋತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಲಾತಂಡದೊಡನೆ ಅದ್ಧೂರಿ ದೇವರ ಮಹೋತ್ಸವವು ವಿಜೃಂಭಣೆಯಿಂದ ಜರುಗಿತು.
ಸ್ವಾಮಿಯವರ ಉತ್ಸವವು ನಿರ್ಮಲ ನಗರ, ಪೊಲೀಸ್ ಕ್ವಾಟ್ರಸ್ ಮಾರ್ಗವಾಗಿ ದೇವಿಗೆರೆಯಲ್ಲಿ ಗಂಗಾ ಸ್ಥಾನ ಮತ್ತು ಪುರೋಹಿತರಿಂದ ಅರ್ಚನೆಗೊಂಡು ಕಳಸದೊಂದಿಗೆ ಬೆಳ್ಳಿಯ ತೇರಿನ ಮೆರವಣಿಗೆಯು ವಿವಿಧ ವಾದ್ಯಗೋಷ್ಠಿಯೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿತು. ಕೀಲು ಕುದುರೆ, ಡೋಲು ಕುಣಿತ, ಬೆದರು ಬೊಂಬೆ, ಚಂಡಿ ಕುಣಿತ ಸೇರಿದಂತೆ ನಾನಾ ಕಲಾತಂಡಗಳು ಭಾಗವಹಿಸಿದ್ದವು.
ಅಮ್ಮನವರಿಗೆ ದೃಷ್ಠಿ ಸೇವೆ ನಂತರ ಅಮ್ಮನವರ ಅಡ್ಡೆಯನ್ನು ಗರ್ಭಗುಡಿಗೆ ಇರಿಸಲಾಯಿತು.
ಇದೆ ವೇಳೆ ಜೈಭೀಮ್ ಬ್ರಿಗೇಡ್ ಜಿಲ್ಲಾಧ್ಯಕ್ಷ ರಾಜೇಶ್ ಮಾಧ್ಯಮದೊಂದಿಗೆ ಮಾತನಾಡಿ, ಶ್ರೀ ದಂಡಿನಮಾರಮ್ಮ, ಶ್ರೀ ಚಿಕ್ಕಮ್ಮ ಮತ್ತು ಶ್ರೀ ಕೆಂಚರಾಯಸ್ವಾಮಿಯವರ ೨೪೧ನೇ ವರ್ಷದ ಅದ್ಧೂರಿ ಜಾತ್ರಾಮಹೋತ್ಸವವು ನಡೆಯುತ್ತಿದೆ. ಕಳೆದ ಎರಡು ದಿನದಿಂದ ಎರಡರಿಂದ ಮೂರು ಲಕ್ಷ ಜನ ರಾಜ್ಯಾಧ್ಯಂತ ಆಗಮಿಸಿ ದೇವಿಯ ದರ್ಶನ ಪಡೆದಿದ್ದಾರೆ ಎಂದರು.
ಇದೆ ವೇಳೆ ಮಾದಿಗ ಸಂಘದ ಜಿಲ್ಲಾಧ್ಯಕ್ಷ ಅರುಣ್ ಕುಮಾರ್, ರಾಮಕೃಷ್ಣ, ಹೆಚ್.ಪಿ. ಶಂಕರರಾಜು, ಉಮೇಶ್, ಕಿರಣ್ ಇತರರು ಉಪಸ್ಥಿತರಿದ್ದರು.
