
ಹೆತ್ತೂರು : ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟಕ್ಕಾಗಿ, ಉದ್ಯಮಿ, ಪ್ರಾಕ್ತನ ವಿದ್ಯಾರ್ಥಿ ಮತ್ತು ಕೊಡುಗೈ ದಾನಿ ಜಾನ್ ರಾಬರ್ಟ್ ಕೊಲ್ಯಾಸ್ಸೋರವರು ಸುಮಾರು 30ಲಕ್ಷ ರುಪಾಯಿಗಳಲ್ಲಿ ನಿರ್ಮಿಸಿದ ಭೋಜನಾಲಯವನ್ನು ಅವರ ಅನುಪಸ್ಥಿತಿಯಲ್ಲಿ ನಿವೃತ್ತ ಕೃಷಿ ಉಪ ನಿರ್ದೇಶಕ ಮತ್ತು ದಾನಿಗಳ ಸಹಪಾಠಿ ಶ್ರೀ ಕೆ.ಬಿ. ಸುಬ್ರಹ್ಮಣ್ಯ ನೆರವೇರಿಸಿದರು.
ಈ ಸಂದರ್ಭದಲ್ಲಿ 1973-74 ರ ಹತ್ತನೆಯ ತರಗತಿ ಸಹಪಾಠಿಗಳು ಉಪಸ್ಥಿತರಿದ್ದರು.
ಶಾಲೆಯ ಪರವಾಗಿ 1974ರ ತಂಡದ ಸುಮಾರು 30 ಪ್ರಾಕ್ತನ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಹರೀಶ್ ಕರಡಿಗಾಲ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲರಾದ ಮಂಜುನಾಥ ಬಿ.ಡಿ. ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ವಿವಿಧ ಸಂಘಟನೆಗಳ ಗಣ್ಯರು, ಹೆತ್ತೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಅನುಸೂಯ, ಉಪ ಪ್ರಾಂಶುಪಾಲರಾದ ಭಾಸ್ಕರ ಬಿ. ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯರಾದ ಸತೀಶ್ ಹೆಚ್.ಕೆ. ಸ್ವಾಗತಿಸಿ, ಶಿಕ್ಷಕಿ ಮಧುಕಲಾ ವಂದಿಸಿದರು. ಉಪನ್ಯಾಸಕಿ ಶೋಭಾ ಡಿ.ಎನ್. ಕಾರ್ಯಕ್ರಮ ನಿರೂಪಿಸಿದರು.
ಸುಮಾರು 300 ವಿದ್ಯಾರ್ಥಿಗಳು ಏಕ ಕಾಲಕ್ಕೆ ಬಿಸಿಯೂಟ ಸವಿಯುವ ಅವಕಾಶ ಮಾಡಿಕೊಟ್ಟ ದಾನಿಗಳಿಗೆ ವಿದ್ಯಾಭಿಮಾನಿಗಳು ಕೃತಜ್ಞತೆ ಸಲ್ಲಿಸಿದರು..



