ಸಕಲೇಶಪುರ/ಆಲೂರು : ಅಂತರ್ಜಲ ಮಟ್ಟ ಹೆಚ್ಚಿಸಿ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೆರೆಗಳ ಅಭಿವೃದ್ಧಿ ಹಾಗೂ ಅಗತ್ಯ ನೀರಾವರಿ ಯೋಜನೆಗಳನ್ನು ಹಂತ ಹಂತವಾಗಿ ಕೈಗೊಳ್ಳಲಾಗುವುದು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ಶನಿವಾರ ಸಕಲೇಶಪುರ ತಾಲೂಕಿನ ದೊಡ್ಡನಾಗರ ಹಾಗೂ ಆಲೂರು ತಾಲೂಕಿನ ಗಂಗರ ಗ್ರಾಮದ ಕೆರೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಕೆರೆಗಳು ಗ್ರಾಮೀಣ ರೈತರ ಜೀವನಾಡಿಯಾಗಿದ್ದು, ಅವುಗಳ ಸಂರಕ್ಷಣೆ ಮತ್ತು ಅಭಿವೃದ್ಧಿಯಿಂದಲೇ ಕೃಷಿ ಬದುಕು ಹಸನಾಗಲು ಸಾಧ್ಯವಾಗುತ್ತದೆ. ಕ್ಷೇತ್ರದ ಅನೇಕ ಭಾಗಗಳಲ್ಲಿ ರೈತರು ಇನ್ನೂ ಮಳೆಯಾಧಾರಿತ ಕೃಷಿಯನ್ನೇ ನಂಬಿಕೊಂಡು ಸಂಕಷ್ಟ ಅನುಭವಿಸುತ್ತಿದ್ದಾರೆ. ಸಾವಿರಾರು ಎಕರೆ ಪ್ರದೇಶದಲ್ಲಿ ಕೆರೆಗಳಿದ್ದರೂ ಅವುಗಳ ಸಮರ್ಪಕ ಅಭಿವೃದ್ಧಿ ಆಗದ ಕಾರಣ ಮಳೆ ಕೊರತೆಯಾದಾಗ ಬರ ಪರಿಸ್ಥಿತಿ ಎದುರಾಗುತ್ತಿದೆ ಎಂದು ಹೇಳಿದರು.

ಹಿರಿಯರ ಕಾಲದಲ್ಲಿ ಕೆರೆಗಳೇ ಜೀವಜಲದ ಮೂಲವಾಗಿದ್ದು, ಅವುಗಳ ನೆರವಿನಿಂದ ವರ್ಷಕ್ಕೆ ಮೂರು ಬೆಳೆ ಭತ್ತ ಸೇರಿದಂತೆ ವಿವಿಧ ಉಪಕೃಷಿಗಳನ್ನು ನಡೆಸಲಾಗುತ್ತಿತ್ತು. ಇದೀಗ ಹಲವಾರು ಕೆರೆಗಳು ಹೂಳು ತುಂಬಿಕೊಂಡು, ಒತ್ತುವರಿಗೆ ಒಳಗಾಗಿ ನೀರು ನಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಜಲಮರುಪೂರಣಕ್ಕೂ ಹಿನ್ನಡೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ದೊಡ್ಡನಾಗರ ಗ್ರಾಮದ ತುಬಿನ ಕೆರೆ ಹಾಗೂ ಗಂಗರ ಗ್ರಾಮದ ದೊಡ್ಡ ಕೆರೆ ಅಭಿವೃದ್ಧಿಗೆ ತಲಾ ₹50 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ಕಾಮಗಾರಿಗಳಡಿ ಕೆರೆ ಹೂಳೆತ್ತುವುದು, ಏರಿ ಮೇಲಿನ ಗಿಡಗಂಟೆ ತೆರವು, ತೂಬುಗಳ ದುರಸ್ತಿ ಹಾಗೂ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿಸುವ ಕೆಲಸ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಕೆರೆಗಳ ಅಭಿವೃದ್ಧಿಯಿಂದ ರೈತರ ನೀರಾವರಿ ಕೃಷಿಗೆ ಉತ್ತೇಜನ ಸಿಗುವುದರ ಜೊತೆಗೆ ಅಂತರ್ಜಲ ಮಟ್ಟವೂ ಹೆಚ್ಚಲಿದೆ. ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯೂ ನಿವಾರಣೆಯಾಗಲಿದೆ ಎಂದು ಹೇಳಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *