
ನವದೆಹಲಿ: ತಮ್ಮ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕವಾಗಿ ಧ್ವನಿ ಎತ್ತುತ್ತಿದ್ದ ವಿದ್ಯಾರ್ಥಿ ಸಮುದಾಯದ ಮೇಲೆ ಕೇಂದ್ರದ ಸಶಸ್ತ್ರ ಪಡೆಗಳು ಎಸಗಿದ ದೌರ್ಜನ್ಯದ ಕರಾಳ ಮುಖ ಕೊನೆಗೂ ಅನಾವರಣಗೊಂಡಿದೆ. ಜುಲೈ 20ರಂದು ದೆಹಲಿಯ ಕನ್ಹಾಟ್ ಪ್ಲೇಸ್ ಪ್ರದೇಶದಲ್ಲಿ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಆಯೋಜಿಸಿದ್ದ ‘ಸಂಸತ್ ಚಲೋ’ ಮೆರವಣಿಗೆಯ ಮೇಲೆ ‘ರ್ಯಾಪಿಡ್ ಆಕ್ಷನ್ ಫೋರ್ಸ್’ (ಆರ್ಎಎಫ್) ಕ್ರೂರವಾಗಿ ‘ಪೆಲೆಟ್ ಗನ್’ ಬಳಸಿ ದಾಳಿ ನಡೆಸಿರುವುದು ಈಗ ಸ್ವತಃ ಭದ್ರತಾ ಪಡೆಗಳ ಆಂತರಿಕ ತನಿಖೆಯಿಂದಲೇ ದೃಢಪಟ್ಟಿದೆ.
ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಯುವಜನರ ಮೇಲೆ ದಮನಕಾರಿ ನೀತಿ ಅನುಸರಿಸಿದ ಆರ್ಎಎಫ್, ಕಾಶ್ಮೀರದಂತಹ ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಬಳಸುವ ಮಾರಕ ‘ಪೆಲೆಟ್ ಗನ್’ಗಳನ್ನು ದೆಹಲಿಯ ರಸ್ತೆಗಳಲ್ಲಿ ಅಮಾಯಕ ವಿದ್ಯಾರ್ಥಿಗಳ ವಿರುದ್ಧ ಪ್ರಯೋಗಿಸಿರುವುದು ಪ್ರಜಾಪ್ರಭುತ್ವದ ಆಶಯಗಳಿಗೆ ಹಿಡಿದ ಕನ್ನಡಿಯಾಗಿದೆ.
ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಆರ್ಪಿಎಫ್) ನಡೆಸಿದ ಆಂತರಿಕ ಪರಿಶೀಲನೆ ಹಾಗೂ ಆರ್ಎಎಫ್ ಸಿಬ್ಬಂದಿ ನಿರ್ವಹಿಸುವ ಲಾಗ್ ಎಂಟ್ರಿಗಳನ್ನು ಕೂಲಂಕಷವಾಗಿ ತನಿಖೆಗೊಳಪಡಿಸಿದಾಗ ಈ ಬೆಚ್ಚಿಬೀಳಿಸುವ ವಿವರಗಳು ಹೊರಬಿದ್ದಿವೆ.
ಪ್ರತಿಭಟನೆಯ ವೇಳೆ ಆರ್ಎಎಫ್ ಸಿಬ್ಬಂದಿಯೊಬ್ಬರು ಅತ್ಯಂತ ಹತ್ತಿರದಿಂದ ಕನಿಷ್ಠ ಏಳು ಸುತ್ತು ಪೆಲೆಟ್ ಗುಂಡುಗಳನ್ನು ಹಾರಿಸಿದ್ದಾರೆ. ಇದರಲ್ಲಿ ಐದು ಸುತ್ತುಗಳ ಕ್ರೂರ ಪೆಲೆಟ್ಗಳು ನೇರವಾಗಿ ಪ್ರತಿಭಟನಾನಿರತ ವಿದ್ಯಾರ್ಥಿಗಳ ದೇಹವನ್ನು ಹೊಕ್ಕಿವೆ! ಇನ್ನುಳಿದ ಎರಡು ಸುತ್ತುಗಳು ನೆಲಕ್ಕೆ ಅಪ್ಪಳಿಸಿವೆ.ಈ ತೀವ್ರ ಸ್ವರೂಪದ ಪೆಲೆಟ್ ಗನ್ ದಾಳಿಯಿಂದಾಗಿ ಕನಿಷ್ಠ ಮೂವರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗಾಯಗೊಂಡವರಲ್ಲಿ ಗುರ್ಗಾಂವ್ನ 25 ವರ್ಷದ ಇರ್ಷಾದ್ ಶೇಖ್, ದೆಹಲಿ ವಿಶ್ವವಿದ್ಯಾಲಯದ 19 ವರ್ಷದ ವಿದ್ಯಾರ್ಥಿ ಸಾಹಿಲ್ ಲೋಚಾಬ್ ಹಾಗೂ ವೃತ್ತಿಧರ್ಮ ನಿರ್ವಹಿಸುತ್ತಿದ್ದ ‘ಔಟ್ಲುಕ್’ ನಿಯತಕಾಲಿಕೆಯ 28 ವರ್ಷದ ಪತ್ರಕರ್ತರೊಬ್ಬರು ಸೇರಿದ್ದಾರೆ. ವಿದ್ಯಾರ್ಥಿಗಳ ಶರೀರದಲ್ಲಿ ಪೆಲೆಟ್ ಚೂರುಗಳು ಹದವಾಗಿ ಹೊಕ್ಕಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
