
ಬೇಲೂರು : ಪ್ರಸಕ್ತ ದಿನಮಾನದಲ್ಲಿ ಮೀತಿಮೀರಿದ ರಸಗೊಬ್ಬರ ಮತ್ತು ಕ್ರೀಮಿಕೀಟನಾಶಗಳ ಬಳಕೆಯಿಂದ ಭೂಮಿ ಹಾಗೂ ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟು ಮಾಡುತ್ತಿರುವ ಹಿನ್ನಲೆಯಲ್ಲಿ ಪ್ರತಿಯೊಬ್ಬರು ರೈತರು ಸುಸ್ಥಿರ ಸಾವಯವ ಕೃಷಿ ಕಡೆ ಗಮನ ನೀಡುವ ಮೂಲಕ ಲಾಭ ಪಡೆಯಬೇಕಿದೆ ಎಂದು ಪುಷ್ಪಗಿರಿ ಮಹಾಸಂಸ್ಥಾನದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿಗಳು ಕರೆ ನೀಡಿದರು.
ತಾಲ್ಲೂಕಿನ ಚಿಲ್ಲೂರು ಗ್ರಾಮದಲ್ಲಿ ಹಾಸನ ಆಕಾಶವಾಣಿ ಮತ್ತು ಪುಷ್ಪಗಿರಿ ಮಹಾಸಂಸ್ಥಾನದ ವತಿಯಿಂದ ಹಮ್ಮಿಕೊಂಡ ಹಳ್ಳಿಧ್ವನಿ ಕಾರ್ಯಕ್ರಮದ ಉದ್ಘಾಟನೆ ನಡೆಸಿ ಮಾತನಾಡಿದ ಅವರು ಕೃಷಿಕರು ಸಾವಯವ ಕೃಷಿ ಜೊತೆಯಲ್ಲಿ ಬಹು ಬೆಳೆಗೆ ಅಧ್ಯತೆ ನೀಡಬೇಕಿದೆ ಮತ್ತು ಬಹುವಾರ್ಷಿಕ ಬೆಳೆಗಳನ್ನು ತಮ್ಮ ಭೂಮಿಯನ್ನು ಹಾಕಬೇಕು, ಕೃಷಿ ಜೊತೆಯಲ್ಲು ಉಪಕಸುಬುಗಳನ್ನು ಕೈಗೊಂಡರೆ ಮಾತ್ರ ಬೇಸಾಯದಲ್ಲಿ ಉತ್ತಮ ವರಮಾನವನ್ನು ಗಳಿಸಬಹುದು ಎಂದ ಅವರು ಈ ನಿಟ್ಟಿನಲ್ಲಿ ಹಾಸನ ಆಕಾಶವಾಣಿ ಕೃಷಿರಂಗದ ಮುಖ್ಯಸ್ಥರಾದ ಡಾ.ವಿಜಯ ಅಂಗಡಿರವರು ಕಳೆದ ಮೂರು ದಶಕದಿಂದ ನಿರಂತರ ರೈತರಿಗೆ ಸೂಕ್ತ ಮಾಹಿತಿ ನೀಡುತ್ತಾ ಹಳ್ಳಿಧ್ವನಿ ಕಾರ್ಯಕ್ರಮ ನಡೆಸುತ್ತಿರುವುದು ನಿಜಕ್ಕೂ ಸಂತೋಷ ತಂದಿದೆ. ರೈತಾಪಿ ವರ್ಗದ ಅಧುನಿಕ ಕೃಷಿಯೊಂದಿಗೆ ದೇಶಿ ಪರಂಪರೆಗೆ ಮಹತ್ವ ನೀಡಬೇಕು ಎಂದರು.
ಪುಷ್ಪಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿ ಗ್ರಾನೈಟ್ ರಾಜಶೇಖರ್ ಮಾತನಾಡಿ, ಪುಷ್ಪಗಿರಿ ಶ್ರೀಗಳು ಕೇವಲ ಧಾರ್ಮಿಕ ಕ್ಷೇತ್ರವಲ್ಲದೆ ಕೃಷಿ, ನೀರಾವರಿ ಕ್ಷೇತ್ರದಲ್ಲಿ ಅದ್ವೀತೀಯ ಕೆಲಸ ಮಾಡಿದ್ದಾರೆ. ಮಠದ ಸುಮಾರು ೮೦ ಎಕ್ಕರೆ ಭೂಮಿಯಲ್ಲಿ ವಾರ್ಷಿಕ,ಬಹುವಾರ್ಷಿಕ ಬೆಳೆಗಳನ್ನು ಸ್ವಯಂ ಕೃಷಿಯಿಂದ ಬೆಳೆದು ಮಾದರಿಯಾಗಿದ್ದಾರೆ. ಹಳ್ಳಿಧ್ವನಿ ಕಾರ್ಯಕ್ರಮ ಒಂದು ಹಳ್ಳಿಗೆ ಸೀಮಿತವಾಗದೆ ಎಲ್ಲಾ ಗ್ರಾಮಗಳಿಗೆ ತಲುಪುವ ಅಂದೋಲವಾಗಬೇಕಿದೆ ಎಂದು ತಿಳಿಸಿದರು.
ಹಾಸನ ಆಕಾಶವಾಣಿ ಕೃಷಿರಂಗ ಮುಖ್ಯಸ್ಥ ಡಾ.ವಿಜಯ ಅಂಗಡಿ ಮಾತನಾಡಿ ಈಗಾಗಲೇ ೧೦ ಹಳ್ಳಿಧ್ವನಿ ಕಾರ್ಯಕ್ರಮ ಜಿಲ್ಲೆ ನಾನಾ ಕಡೆಯಲ್ಲಿ ನಡೆದಿದ್ದು, ಸದ್ಯ ಐತಿಹಾಸಿಕ ಮತ್ತು ಮಠದ ಪರಂಪರೆವುಳ್ಳ ಚಿಲ್ಕೂರಿನಲ್ಲಿ ನಡೆಸುತ್ತಿರುವುದು ನಿಜಕ್ಕೂ ಹರ್ಷ ತಂದಿದೆ. ಹಳ್ಳಿಧ್ವನಿ ಕಾರ್ಯಕ್ರಮ ಅಯಾ ಗ್ರಾಮದ ಆಚಾರ-ವಿಚಾರ, ಉಡುಗೆ-ತೊಡುಗೆ, ಕೃಷಿ ಚಟುವಟಿಕೆ, ಐತಿಹಾಸಿಕ ಹಿನ್ನಲೆ, ಧಾರ್ಮಿಕ ಪರಂಪರೆ ಹಾಗೇಯೆ ಇಲ್ಲಿನ ಜಾನಪದ ಸೇರಿದಂತೆ ಹತ್ತಾರು ಸಂಗತಿಗಳನ್ನು ಜನತೆಗೆ ತಿಳಿಸುವ ಪ್ರಯತ್ನಕ್ಕೆ ಆಕಾಶವಾಣಿ ಮುಂದಾಗಿದೆ.
ಚಿಲ್ಕೂರು ಗ್ರಾಮ ಹೊಯ್ಸಳ ಕಾಲದಲ್ಲಿ ಕೂಡ ಆಸ್ಥಿತ್ವದಲ್ಲಿತ್ತು ಎಂಬ ಬಗ್ಗೆ ಐತಿಹ್ಯವಿದೆ ಎಂದ ಅವರು ಗ್ರಾಮದಲ್ಲಿನ ಮಠದ ಗದ್ದುಗೆ ಮತ್ತು ವೀರಗಲ್ಲುಗಳ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯಬೇಕು ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಸಚ್ಚೀನ್,ಆಕಾಶವಾಣಿ ಮಧುಸೂದನ್, ಯೋಗ ಶಿಕ್ಷಕ ಚೇತನ್ ಗುರೂಜಿ, ಕೃಷಿ ನಿರ್ದೇಶಕ ರಂಗಸ್ವಾಮಿ, ವಿಜಯಕುಮಾರ್, ಗುತ್ತಿಗೆದಾರ ಚಂದ್ರೇಗೌಡ, ರವಿಕುಮಾರ್, ಪುಪ್ಪೇಗೌಡ, ಯಶೋಧರ್, ನಿವೃತ್ತ ಪೊಲೀಸ್ ಅಧಿಕಾರಿ ನಾಗರಾಜ್ ಸೇರಿದಂತೆ ಇನ್ನು ಮುಂತಾದವರು ಹಾಜರಿದ್ದರು.
ಬಾಕ್ಸ್ ನ್ಯೂಸ್ : ರೈತರು ಸಮತೋಲದಿಂದ ಕೂಡಿದ ಸಂಯುಕ್ತ ರಸಗೊಬ್ಬರಗಳ ಬಳಕೆಯನ್ನು ಇಲಾಖೆಯ ಶಿಪಾರಸ್ಸು ರೀತಿಯಲ್ಲಿ ಉಪಯೋಗಿಸಬೇಕಿದೆ. ಏಕದಳ ಬೆಳೆಯೊಂದಿಗೆ ದ್ವಿದಳ ಬೆಳೆಗಳಿಗೆ ಹೆಚ್ಚಿನ ಮಹತ್ವ ನೀಡಬೇಕಿದೆ. ಮುಂದಿನ ದಿನದಲ್ಲಿ ಪುಷ್ಪಗಿರಿ ಶ್ರೀಗಳ ಸ್ವಯಂ ಕೃಷಿ ಪದ್ದತಿ ಕೃಷಿಕರಿಗೆ ಮಾದರಿಯಾಗಲಿ ಎಂದು ಬೇಲೂರು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಂಗಸ್ವಾಮಿ ಹೇಳಿದರು.
