
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಪ್ರವಾಸಿತಾಣ ಪಟ್ಲಬೆಟ್ಟಕ್ಕೆ ಬೈಕ್ನಲ್ಲಿ ಬಂದಿದ್ದ ಕೆಲ ಪ್ರವಾಸಿಗರ ಮೇಲೆ ಸ್ಥಳೀಯ ಜೀಪ್ ಹಾಗೂ ಪಿಕ್ಅಪ್ ವಾಹನ ಚಾಲಕರು ಹಲ್ಲೆ ನಡೆಸಿದ ಘಟನೆ ನಡೆದಿದೆ.
ಘಟನೆ ಸಂಬಂಧ ಪ್ರವಾಸಿಗರು ದೂರು ದಾಖಲಿಸಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಹಾಸನ, ಜೂನ್.25: ಪಟ್ಲಬೆಟ್ಟದಲ್ಲಿ ಪ್ರವಾಸಿಗರ ಮೇಲೆ ಸ್ಥಳೀಯರಿಂದ ಹಲ್ಲೆ (Assault) ನಡೆದಿರುವ ಆರೋಪ ಕೇಳಿ ಬಂದಿದೆ. ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಪ್ರವಾಸಿತಾಣ ಪಟ್ಲಬೆಟ್ಟ ಬಳಿ ಸ್ಥಳೀಯ ಜೀಪ್ ಹಾಗೂ ಪಿಕ್ಅಪ್ ವಾಹನ ಚಾಲಕರು ಬೈಕ್ನಲ್ಲಿ ಬಂದ ಪ್ರವಾಸಿಗರ ಮೇಲೆ ಹಲ್ಲೆ ನಡೆಸಿದ್ದಾರೆ.
ಜೂ.23ರಂದು ಕೆಲ ಪ್ರವಾಸಿಗರು ಬೈಕ್ನಲ್ಲಿ ಪಟ್ಲಬೆಟ್ಟಕ್ಕೆ ಹೋಗಿದ್ದರು. ಪಟ್ಲಬೆಟ್ಟಕ್ಕೆ ಭೇಟಿ ನೀಡಿ ವಾಪಸ್ ತೆರಳುವಾಗ ಅಡ್ಡಗಟ್ಟಿ ಹಲ್ಲೆ ನಡೆಸಲಾಗಿದೆ ಎನ್ನಲಾಗುತ್ತಿದೆ.
ಜೀಪುಗಳನ್ನು ಬಾಡಿಗೆ ಪಡೆದು ಬಾರದೇ ತಮ್ಮ ಬೈಕ್ ಗಳಲ್ಲಿ ಹೋಗಿದ್ದಕ್ಕೆ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಬೈಕ್ಗಳಲ್ಲಿ ಹೋಗಬೇಡಿ ಅಂದ್ರೂ ಯಾಕೆ ಹೋದ್ರಿ ಅಂತ ಚಾಲಕರು ಪ್ರಶ್ನೆ ಮಾಡಿದ್ದು ನಂತರ ಬೈಕ್ ಗಳಲ್ಲಿದ್ದ ಸವಾರರ ಮೇಲೆ ಜೀಪು ಚಾಲಕರು ಹಲ್ಲೆ ಮಾಡಿದ್ದಾರೆ.
ಈ ಘಟನೆ ಸಂಬಂಧ ದಕ್ಷಿಣ ಕನ್ನಡ ಮೂಲದ ಪ್ರವಾಸಿಗರಾದ ಭುವಿತ್ ಪೂಜಾರಿ ಎಂಬುವವರು ದೂರು ದಾಖಲಿಸಿದ್ದಾರೆ.
ಗಗನ್, ಕಿರಣ್, ನಿಶಾಂತ್, ಮದನ್ ಎಂಬುವವರ ಮೇಲೆ ಯಸಳೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಪ್ರವಾಸಿ ಚಟುವಟಿಕೆಗಳ ಮೇಲೆ ಇಲಾಖೆ ಸೂಕ್ತ ನಿರ್ವಹಣೆ ಮಾಡುತ್ತಿಲ್ಲ ಎಂದು ಪ್ರವಾಸಿಗರು ಆಕ್ರೋಶ ಹೊರ ಹಾಕಿದ್ದಾರೆ.
