ಪಂಜಾಬ್​ ಕಿಂಗ್ಸ್​ ವಿರುದ್ಧದ ಐಪಿಎಲ್​ನ ಕ್ವಾಲಿಫೈಯರ್​-1ರ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ವಿಜಯ ಸಾಧಿಸಿ ನೇರವಾಗಿ ಫೈನಲ್​ಗೆ ಎಂಟ್ರಿ ಕೊಟ್ಟಿದೆ. ಇದರಿಂದ 2009, 2011, 2016ರ ಬಳಿಕ 4ನೇ ಬಾರಿಗೆ ಆರ್​ಸಿಬಿ ಫೈನಲ್​ಗೆ ಹೋಗಿದೆ.

ಇದರಿಂದ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ಸಂತಸ ಮೂಡಿದೆ.

ಮುಲ್ಲನಪುರದ ನ್ಯೂ ಪಿಸಿಎ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ನಾಯಕ ರಜತ್ ಪಾಟಿದಾರ್, ಬೌಲಿಂಗ್ ಆಯ್ಕೆ ಮಾಡಿದರು. ಇದರಿಂದ ಪಂಜಾಬ್​ ಕಿಂಗ್ಸ್​ ಮೊದಲ ಬ್ಯಾಟಿಂಗ್ ಮಾಡುವ ಅವಕಾಶ ಪಡೆಯಿತು. ಓಪನರ್ ಆಗಿ ಕ್ರೀಸ್​ಗೆ ಆಗಮಿಸಿದ ಪ್ರಿಯಾಂಶ್​ ಆರ್ಯ 7, ಪ್ರಭಾಸಿಮ್ರಾನ್​ ಸಿಂಗ್ 18 ರನ್​ಗೆ ಔಟ್​ ಆದರು. ನಂತರ ನಾಯಕ ಶ್ರೇಯಸ್​ ಅಯ್ಯರ್ ಕೂಡ ಕೇವಲ 2 ರನ್​ಗೆ ಡ್ರೆಸ್ಸಿಂಗ್​ ರೂಮ್​ನತ್ತ ಹೆಜ್ಜೆ ಹಾಕಿದರು. ಇವರ ಬೆನ್ನಲ್ಲೇ ಜೋಶ್ ಇಂಗ್ಲಿಷ್​ ಕೇವಲ 4 ರನ್​ಗೆ ವಿಕೆಟ್​ ಕಳೆದುಕೊಂಡರು.

ಬ್ಯಾಟಿಂಗ್​​ ಮಾಡಲು ಕ್ರೀಸ್​ಗೆ ಬಂದ ನೆಹಾಲ್ ವಧೇರಾ, ಯಶ್​ ದಯಾಳ್​ ಬೌಲಿಂಗ್​ನಲ್ಲಿ ಬೋಲ್ಡ್​ ಆದರು, ಸುಯಶ್ ಶರ್ಮಾ ಬೌಲಿಂಗ್​ನಲ್ಲಿ ಶಶಾಂಕ್​ ಸಿಂಗ್​ 3, ಮುಶೀರ್ ಖಾನ್​, ಮಾರ್ಕಸ್ ಸ್ಟೊಯಿನಿಸ್ ಔಟ್​ ಆದರು. ಇದರಿಂದ ಪಂಜಾಬ್​ ಕಿಂಗ್ಸ್​ ಕೇವಲ 14.1 ಓವರ್​ಗಳಲ್ಲಿ ಆಲೌಟ್​ ಆಗಿ 102 ರನ್​ಗಳ ಟಾರ್ಗೆಟ್​ ಅನ್ನು ಆರ್​ಸಿಬಿಗೆ ನೀಡಿತ್ತು

ಈ ಸುಲಭ ಟಾರ್ಗೆಟ್​ ಅನ್ನು ಚೇಸ್ ಮಾಡಿದ ಆರ್​ಸಿಬಿ 10 ಓವರ್​ಗೆ ಎರಡು ವಿಕೆಟ್​ ಕಳೆದುಕೊಂಡು 106 ರನ್​ ಗಳಿಸುವ ಮೂಲಕ ಜಯ ಸಾಧಿಸಿತು. ಆರ್​ಸಿಬಿ ಪರವಾಗಿ ಓಪನರ್ಸ್​ ವಿರಾಟ್​ ಕೊಹ್ಲಿ ಅವರು ಕೇವಲ 12 ರನ್​ಗೆ ಔಟ್​ ಆದ್ರೆ, ಫಿಲ್ ಸಾಲ್ಟ್​ ಘರ್ಜನೆ ಜೋರಾಗಿ ಇತ್ತು. 3ನೇ ಬ್ಯಾಟರ್​ ಆಗಿ ಕಣಕ್ಕೆ ಇಳಿದ ಕನ್ನಡಿಗ ಮಯಾಂಕ್ ಅಗರ್ವಾಲ್​ ಅವರು 19 ರನ್​ಗೆ ಶ್ರೇಯಸ್​ ಅಯ್ಯರ್​ಗೆ ಕ್ಯಾಚ್​ ಕೊಟ್ಟು ನಿರಾಸೆಗೆ ಒಳಗಾದರು.

ಮಯಾಂಕ್ ಅಗರ್ವಾಲ್ ನಂತರ ನಾಯಕ ರಜತ್ ಪಾಟಿದಾರ್​ ಬ್ಯಾಟಿಂಗ್​ಗೆ ಬಂದರು. ಇನ್ನು ಓಪನರ್​​ ಆಗಿ ಬ್ಯಾಟಿಂಗ್​ಗೆ ಬಂದಿದ್ದ ಫಿಲ್​ ಸಾಲ್ಟ್​, ಪಂಜಾಬ್​ ಬೌಲರ್​​ಗಳಿಗೆ ಮನ ಬಂದಂತೆ ಚಚ್ಚಿದರು.​ ಕೇವಲ 27 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಆಕಾಶದೆತ್ತರದ ಸಿಕ್ಸರ್​ಗಳಿಂದ 56 ರನ್​ಗಳನ್ನು ಬಾರಿಸಿ ಅಜೇಯರಾಗಿ ಉಳಿದರು. ರಜತ್ ಪಾಟಿದಾರ್ ಕೊನೆಗೆ ಸಿಕ್ಸರ್​ ಬಾರಿಸೋ ಮೂಲಕ ಆರ್​ಸಿಬಿಗೆ ಜಯ ತಂದರು. ಈ ಜಯದೊಂದಿಗೆ ಆರ್​ಸಿಬಿ ಐಪಿಎಲ್​ ಇತಿಹಾಸಲ್ಲಿ 4ನೇ ಬಾರಿಗೆ ಫೈನಲ್​ಗೆ ಎಂಟ್ರಿ ಕೊಟ್ಟಂತೆ ಆಗಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *